ಬೆಂಗಳೂರು: 13,352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ವಿಭಾಗಿಯ ಪೀಠ ರದ್ದು ಮಾಡಿದ್ದು, ನೇಮಕಾತಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ, ನ್ಯಾಯಮೂರ್ತಿ ಎಜಿಎಸ್ ಕಮಲ್ ಅವರಿದ್ದ ವಿಭಾಗಿಯ ಪೀಠವು 13,352 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಆದೇಶ ನೀಡಿದೆ. ಮಾರ್ಚ್ 8, 2023 ಆಯ್ಕೆ ಪಟ್ಟಿಯಂತೆ ನೇಮಕಾತಿ ಅಂತಿಮಗೊಳಿಸಲು ಸೂಚನೆ ನೀಡಲಾಗಿದೆ.
ಸರ್ಕಾರದ ಅಧಿಸೂಚನೆಯಂತೆ ಆದಾಯ ಪ್ರಮಾಣ ಪತ್ರ ಸಲ್ಲಿಸಿದವರ ಆಯ್ಕೆ ಅಂತಿಮವಾಗಿದೆ. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆ ಮುಂದೂಡಲಾಗಿದೆ. ನೊಂದ ಅಭ್ಯರ್ಥಿಗಳು ಕೆಎಟಿಯಲ್ಲಿ ದಾವೆ ಹೂಡಬಹುದಾಗಿದೆ. ದಾವೆ ಇತ್ಯರ್ಥವಾಗುವವರೆಗೆ ವಿವಾದಿತ ಅಭ್ಯರ್ಥಿಗಳ ಆಯ್ಕೆ ಮುಂದೂಡಿಕೆ ಆಗಿರುತ್ತದೆ.
ಜೂನ್ 8, 2023 ಆಯ್ಕೆ ಪಟ್ಟಿಯಲ್ಲಿ 451 ಅಭ್ಯರ್ಥಿಗಳ ಬದಲಾವಣೆ ಆಗಿದೆ. ಹೊಸ ನೀತಿಯಲ್ಲಿ 451 ಅಭ್ಯರ್ಥಿಗಳಿಗೆ ಬದಲಿ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಕೆಎಟಿ ಆದೇಶದ ಬಳಿಕ ಬದಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.ಹಿಂದುಳಿದ ವರ್ಗದಲ್ಲಿ ಪರಿಗಣಿಸುವಾಗ ವಿವಾಹಿತ ಮಹಿಳೆಯರಿಗೆ ಪತಿಯ ಆದಾಯ ಪರಿಗಣನೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ನಿಯಮ ಅನ್ವಯಿಸಿತ್ತು.
ರಾಜ್ಯ ಸರ್ಕಾರದ ಈ ನೀತಿಯನ್ನು ಏಕ ಸದಸ್ಯ ಪೀಠ ಅಮಾನ್ಯಗೊಳಿಸಿತ್ತು. ಅಭ್ಯರ್ಥಿಯ ತಂದೆಯ ಜಾತಿ, ಆದಾಯ ಪ್ರಮಾಣ ಪತ್ರ ಆಧರಿಸಲು ಸೂಚಿಸಿತ್ತು. ಇದೀಗ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯಪೀಠ ರದ್ದುಗೊಳಿಸಿದೆ ಎನ್ನಲಾಗಿದೆ.