ಶಿವಮೊಗ್ಗ: ಬೆಳಗಾವಿಯಲ್ಲಿ ನಡೆದ ಶಫಡ್ರ್ಸ್ ಇಂಡಿಯಾ ಇಂಟರ್ ನ್ಯಾಷನಲ್ ರಾಷ್ಟ್ರೀಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಮತ್ತು ಅದ್ಧೂರಿಯಾಗಿ ನಡೆದಿದ್ದು, ಶಿವಮೊಗ್ಗದಿಂದಲೂ ಕೂಡ ನೂರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಿ ಯಶಸ್ವಿಯಾಗಿಸಿದ್ದಾರೆ. ಆಯೋಜಕರಿಗೆ ಅಭಿನಂದನೆಗಳು ಎಂದು ರಾಜ್ಯ ಕುರುಬರ ಸಂಘದ ಮಾಜಿ ಉಪಾಧ್ಯಕ್ಷ ಎಸ್.ಪಿ. ಶೇಷಾದ್ರಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆದ 9ನೇ ರಾಷ್ಟ್ರೀಯ ಶೆಫಡ್ರ್ಸ್ ಇಂಡಿಯಾ ಇಂಟರ್ನ್ಯಾಷನಲ್ ಸಮ್ಮೇಳನದಲ್ಲಿ ಕುರುಬರ ಮಹಾಶಕ್ತಿಯ ಪ್ರದರ್ಶನವೇ ನಡೆಯಿತು. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಜನಸಾಗರವೇ ಕಿಕ್ಕಿರಿದಿತ್ತು. ಕರ್ನಾಟಕದ ಕುರುಬರ ಸಂಘಟನೆ ಕಂಡು ಇಡೀ ದೇಶವೇ ಇತ್ತ ಕಡೆ ನೋಡುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಮ್ಮೇಳನ ಕೂಡ ತುಂಬಾ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಡೆಯಿತು.ಊಟ, ತಿಂಡಿಯ ವ್ಯವಸ್ಥೆ ಕೂಡ ಚೆನ್ನಾಗಿತ್ತು. ಎಲ್ಲಿಯೂ ಸಂಚಾರಕ್ಕೆ ತೊಂದರೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಈ ಸಮ್ಮೇಳನದ ನೇತೃತ್ವವನ್ನು ಶಫಡ್ರ್ಸ್ ಇಂಡಿಯಾ ಅಧ್ಯಕ್ಷ ಎ.ಹೆಚ್. ವಿಶ್ವನಾಥ್, ಉಪಾಧ್ಯಕ್ಷ ಹೆಚ್.ಎಂ. ರೇವಣ್ಣ ವಹಿಸಿದ್ದು, ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ. ಅವರಿಗೆ ಅಭಿನಂದನೆಗಳು ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸ್ವಾಮೀಜಿಗಳಾದ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸಿದ್ದರಾಮಾನಂದಪುರಿ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಹರ್ಯಾಣದ ರಾಜ್ಯಪಾಲರು ಸಮಾರಂಭ ಉದ್ಘಾಟಿಸಿದರು. ಹೀಗೆ ಸಮಾರಂಭ ಅತ್ಯಂತ ಯಶಸ್ವಿಯಾಗಿ ನಡೆದಿದೆ.
ಸಮಾರಂಭದಲ್ಲಿ ಹಲವು ನಿರ್ಣಯ ತೆಗೆದುಕೊಳ್ಳಲಾಗಿದೆ. ಶೋಷಿತರೆಲ್ಲಾ ಒಟ್ಟಾಗಬೇಕೆಂದು ಮುಖ್ಯಮಂತ್ರಿಗಳು ಕರೆನೀಡಿದ್ದಾರೆ. ನೆರವಿನ ಭರವಸೆ ಕೂಡ ಕೊಟ್ಟಿದ್ದಾರೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ. ಕುರಿಗಾಹಿಗಳಿಗೆ 5ಸಾವಿರ ಕೋಟಿ ಸಾಲ ನೀಡಬೇಕು ಎಂದು ಕೂಡ ಒತ್ತಾಯಿಸಲಾಗಿದೆ. ಮುಂದಿನ ಸಮ್ಮೇಳನ ದೆಹಲಿಯಲ್ಲಿ ನಡೆಯಲಿದೆ. ಒಟ್ಟಾರೆ ಈ ಸಮ್ಮೇಳನ ಅದ್ವಿತೀಯ ಯಶಸ್ಸು ಪಡೆದಿದೆ ಎಂದು ತಿಳಿಸಿದ್ದಾರೆ.