ಶಿವಮೊಗ್ಗ: ಕಾವೇರಿ ನೀರಿಗಾಗಿ ರೈತರ ಹೋರಾಟಕ್ಕೆ ಬೆಂಬಲಿಸಿ ಇಂದು ಜಯ ಕರ್ನಾಟಕ ಜನಪರ ವೇದಿಕೆ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಕಾವೇರಿ ನದಿ ನೀರು ವಿಚಾರವಾಗಿ ಕಾವೇರಿ ನದಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ರಾಜ್ಯ ಸರ್ಕಾರ ಮಂಡಿಸಿರುವ ವಾದಗಳು ವಿಫಲವಾಗಿವೆ. ಕೆ.ಆರ್.ಎಸ್. ಅಣೆಕಟ್ಟಿನಲ್ಲಿ ನೀರಿನ ಬಗ್ಗೆ ವಾಸ್ತವಾಂಶ ವಾದ ಮಂಡಿಸುವಲ್ಲಿ ಹಿಂದಿನ ಸರ್ಕಾರಗಳು ಸೇರಿದಂತೆ ಈಗಿನ ಸರ್ಕಾರಗಳು ಕೂಡ ವಿಫಲವಾಗಿವೆ. ಅದೇ ರೀತಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರವೂ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕಾವೇರಿ ನದಿ ಪ್ರಾಧಿಕಾರ ವಾಸ್ತವಾಂಶ ಗಣನೆಗೆ ತೆಗೆದುಕೊಳ್ಳದೆ ಇರುವುದನ್ನು ಪ್ರತಿಭಟನಕಾರರು ಖಂಡಿಸಿದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ದಿ. ಬಂಗಾರಪ್ಪ ಅವರು ಕಾವೇರಿ ನದಿ ನೀರಿಗಾಗಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರಾಜ್ಯದ ಎಲ್ಲಾ ಸಂಸದರು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ಅದೇರೀತಿ ಅಂದಿನ ಮಂಡ್ಯದ ಸಂಸದ ಅಂಬರೀಷ್ ಅವರು ಸಹ ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಆದ ಅನ್ಯಾಯ ಖಂಡಿಸಿ ರಾಜೀನಾಮೆ ಕೊಟ್ಟಿದ್ದರು. ಇಂತಹ ಯಾವುದೇ ನಿರ್ಧಾರವನ್ನು ಸಂಸದರಾಗಲಿ, ಶಾಸಕರಾಗಲಿ, ತೆಗೆದುಕೊಳ್ಳದಿರುವುದು ವಿಷಾದನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ಸುಗ್ರೀವಾಜ್ಞೆ ಮೂಲಕ ರಾಜ್ಯದ ರೈತರಿಗೆ ನೀರು ಉಳಿಸಿಕೊಳ್ಳಬೇಕು. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಡೆಯಬೇಕು ಮತ್ತು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ರಾಜ್ಯದ ಎಲ್ಲಾ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಎಸ್.ಕೆ. ರಘುವೀರ್ ಸಿಂಗ್, ಪ್ರಮುಖರಾದ ಎಸ್.ಮಲ್ಲೇಶ್, ಹರನಾಥ್ ಸಿಂಗ್, ಶ್ರೀನಿವಾಸ್ ಸೇರಿದಂತೆ ಮುಂತಾದವರಿದ್ದರು.