ನವದೆಹಲಿ: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಲ್ಲಿ ವಾಕ್ ಶ್ರವಣ ದೋಷವುಳ್ಳ ವಕೀಲೆಯೊಬ್ಬರು ವಾದ ಮಂಡನೆ ಮಾಡಿದ್ದು ಈ ಮೂಲಕ ದಾಖಲೆ ಸೃಷ್ಠಿಯಾಗಿದೆ.
ವಾಕ್ ಶ್ರವಣ ದೋಷವುಳ್ಳ ಸಾರಾ ಸನ್ನಿ ಎಂಬ ವಕೀಲೆ ಸಂಕೇತ ಭಾಷೆಯನ್ನು ಬಳಸುವ ಮೂಲಕ ವಾದ ಮಂಡಿಸಿದ್ದಾರೆ. ಭಾರತದ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರಿದ್ದ ನ್ಯಾಯಪೀಠವು ವರ್ಚುವಲ್ ಆಗಿ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವೇಳೆ ವಕೀಲೆ ಸಾರಾ ಸನ್ನಿ ತಮ್ಮ ವ್ಯಾಖ್ಯಾನಕಾರ ಸೌರಭ್ ರಾಯ್ ಚೌಧರಿ ಮೂಲಕ ವಾದವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮುಂದೆ ಮಂಡಿಸಿದ್ದಾರೆ.
ಸಾರಾ ಅವರ ಸಂಕೇತ ಭಾಷೆಯನ್ನು ಸೌರಭ್ ಅವರು ಬಾಯಿ ಮಾತಿನಲ್ಲಿ ಹೇಳುವ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ತಿಳಿಸಿಕೊಟ್ಟಿದ್ದಾರೆ. ಈ ಪ್ರಯತ್ನವನ್ನು ಅನೇಕ ಗಣ್ಯರು, ಹಿರಿಯ ವಕೀಲರು ಶ್ಲಾಘಿಸಿದ್ದಾರೆ.
ಅರ್ಜಿಯೊಂದರ ವಿಚಾರಣೆಯ ಆರಂಭದ ವೇಳೆ ವರ್ಚುವಲ್ ವಿಚಾರಣೆಯ ತಾಂತ್ರಿಕ ತಂಡವು ಸಾರಾಗೆ ಸ್ಕ್ರೀನ್ ಮೇಲೆ ಬರಲು ಅನುತಿ ನೀಡದೇ ಕೇವಲ ವ್ಯಾಖ್ಯಾನಕಾರ ಸೌರಭ್ ಗೆ ಅನುಮತಿ ನೀಡಿತು. ಹೀಗಾಗಿ ಮೊದಲಿಗೆ ಸ್ಕ್ರೀನ್ ನಲ್ಲಿ ಸೌರಭ್ ಮಾತ್ರ ಕಾಣಿಸಿಕೊಂಡು ಸಾರಾ ತೆರೆಯ ಹಿಂದೆ ಸಂಜ್ಞೆಯ ಮೂಲಕ ಹೇಳುತ್ತಿದ್ದ ವಿವರವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಬಾಯಿ ಮಾತಿನ ಮೂಲಕ ತಿಳಿಸಿದರು.
ಆಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರು, ವಕೀಲೆ ಸಾರಾ ಅವರಿಗೂ ಸ್ಕ್ರೀನ್ ಮೇಲೆ ಅವಕಾಶ ನೀಡಿ ಅಂತ ಆದೇಶಿಸಿದರು. ಆಗ ಸಾರಾ ಅವರು ಒಂದು ಸ್ಕ್ರೀನ್ ನಲ್ಲಿ ತಮ್ಮ ಸಂಜ್ಞೆ ವಾದವನ್ನು ಮಂಡಿಸಿದರು. ಅವರ ವ್ಯಾಖ್ಯಾನಕಾರ ಸೌರಭ್, ಅವರ ಸಂಜ್ಞೆಗಳನ್ನು ಬಾಯಿ ಮಾತಿನಲ್ಲಿ ನ್ಯಾಯಪೀಠದ ಗಮಕ್ಕೆ ತಿಳಿಸಿದರು.
ನ್ಯಾಯಮೂರ್ತಿ ಚಂದ್ರ ಚೂಡ ಅವರು ಮೊದಲಿನಿಂದಲೂ ನ್ಯಾಯಕ್ಕೆ ಸಮಾನ ನ್ಯಾಯದಾನ ಪ್ರತೀಕರಾಗಿದ್ದಾರೆ. ಇಬ್ಬರು ಅಂಗವಿಕಲ ಬಾಲಕಿಯರ ದತ್ತು ತಂದೆಯೂ ಹೌದು. ವರ್ಷಾರಂಭದಲ್ಲಿ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳ್ನು ತಮ್ಮ ಕಚೇರಿಗೆ ಪ್ರವಾಸಕ್ಕೆಂದು ಕರೆತಂದು ಎಲ್ಲರನ್ನು ಚಕಿತಗೊಳಿಸಿದ್ದರು.
ನ್ಯಾಯಾಲಯವು ಹೇಗೆ ಕೆಲಸ ಮಾಡುತ್ತದೆ. ಅಲ್ಲಿ ತಮ್ಮ ಕೆಲಸ ಏನು ಎಂಬುದನ್ನು ಅವರು ತಮ್ಮ ಹೆಣ್ಣುಮಕ್ಕಳಿಗೆ ವಿವರಿಸಿದ್ದರು. ಇಂತಹ ಅವರು ದೇಶದ ಇತಿಹಾಸದಲ್ಲಿ ಇದೇ ಮೊದಲು ಎನ್ನುವಂತೆ ಮೂಕ ವಕೀಲೆಯೊಬ್ಬರಿಗೆ ವಾದ ಮಂಡಿಸೋದಕ್ಕೆ ಅವಕಾಶ ಮಾಡಿಕೊಟ್ಟು, ಹೊಸ ಇತಿಹಾಸವನ್ನು ಇದೀಗ ಬರೆದಿದ್ದಾರೆ.