ಶಿವಮೊಗ್ಗ: ಮಾನವ ಹಕ್ಕುಗಳ ರಕ್ಷಣೆಗಾಗಿ ಶಿವಮೊಗ್ಗದಲ್ಲಿ ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ನ ಜಿಲ್ಲಾ ಶಾಖೆ ಇಂದಿನಿಂದ ಅಸ್ತಿತ್ವಕ್ಕೆ ಬಂದಿದೆ ಎಂದು ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಹೇಳಿದರು.
ಅವರು ಇಂದು ಮೀಡಿಯಾ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ 2019 ರಿಂದ ದೇಶದ 10 ರಾಜ್ಯಗಳಲ್ಲಿ ಮಾನವ ಹಕ್ಕುಗಳ ಪರಿಷತ್ ಅಸ್ತಿತ್ವದಲ್ಲಿದೆ. ಅದರ ಜಿಲ್ಲಾ ಶಾಖೆಯನ್ನು ಅಬ್ದುಲ್ ರಹೀಂ ಅವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಸ್ಥಾಪಿಸಲಾಗಿದೆ. ಇಂದೆಯೇ ಪದಾಧಿಕಾರಿಗಳ ಆಯ್ಕೆಯೂ ನಡೆಯಲಿದೆ ಎಂದರು.
ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇದೆ. ಹಾಗೆಯೇ ಸಮಾನತೆ, ಶೋಷಣೆ ವಿರುದ್ಧ ಆರೋಗ್ಯ, ಧರ್ಮದ ಸ್ವಾತಂತ್ರ್ಯ ಮುಂತಾದ ಹಕ್ಕುಗಳ ರಕ್ಷಣೆಗಾಗಿ, ಬಡಜನರ ಕಂಬನಿ ಒರೆಸಲು, ಸರ್ಕಾರದ ಯೋಜನೆಗಳು ಸಮರ್ಥವಾಗಿ ತಲುಪಿಸಲು ಬಡವರಿಗೆ ನ್ಯಾಯ ಒದಗಿಸಲು ನಮ್ಮ ಸಂಘಟನೆ ಕೆಲಸ ಮಾಡುತ್ತದೆ ಎಂದರು.
ಯಾರು ಬೇಕಾದರೂ ತಮ್ಮ ಸಮಸ್ಯೆಗಳನ್ನು ನಮ್ಮ ಹತ್ತಿರ ಹೇಳಿಕೊಳ್ಳಬಹುದು. ಅವರ ಸಮಸ್ಯೆಗಳಿಗೆ ನಮ್ಮ ಸಂಘಟನೆ ಸ್ಪಂದಿಸುತ್ತದೆ. ಸೂಕ್ತ ರಕ್ಷಣೆ ಮತ್ತು ನೆರವು ನೀಡುತ್ತದೆ. ಪೊಲೀಸ್ ಇಲಾಖೆಗಳಿಂದ ಆಗುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆಯೂ ನಾವು ಧ್ವನಿ ಎತ್ತುತ್ತೇವೆ. ಹಲವು ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆಯೂ ನಾವು ಗಮನಹರಿಸುತ್ತೇವೆ. ಮುಖ್ಯವಾಗಿ ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯದಲ್ಲಿ ನಾವು ಎಚ್ಚರಿಕೆ ನೀಡುತ್ತೇವೆ. ಶೋಷಿತರಿಗೆ ನೆರವು ನೀಡುತ್ತೇವೆ. ಇದು ನಮ್ಮ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿಯೋಜಿತ ಜಿಲ್ಲಾಧ್ಯಕ್ಷ ಅಬ್ದುಲ್ ರಹೀಂ, ಪ್ರಮುಖರಾದ ಗೋಪಿನಾಥ್, ರಾಘವೇಂದ್ರ, ಚೇತನ್, ಕವಿತಾ, ಕೌಸರ್ ಬಾನು, ಹುಲಗಿ ಕೃಷ್ಣ, ಅಖಿಲೇಶ್ ಮೊದಲಾದವರಿದ್ದರು.