ಶಿವಮೊಗ್ಗ: ಅಸಹಾಯಕರು, ಪಾರ್ಶ್ವವಾಯು ಪೀಡಿತರು, ಹಿರಿಯರು ಸೇರಿದಂತೆ ಜೀವನದಲ್ಲಿ ನೋವು ಅನುಭವಿಸಿ ಕಷ್ಟದ ಬದುಕು ಸಾಗಿಸುತ್ತಿರುವವರ ಸೇವೆ ಮಾಡುವುದು ಪುಣ್ಯದ ಕೆಲಸ ಎಂದು ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷೆ ಪೂರ್ಣಿಮಾ ಸುನೀಲ್ ಹೇಳಿದರು.
ಶಿವಮೊಗ್ಗ ನಗರದಲ್ಲಿರುವ ಗುಡ್ಲಕ್ ಆರೈಕೆ ಕೇಂದ್ರದಲ್ಲಿ ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ವತಿಯಿಂದ ಆಹಾರ ಕಿಟ್ಗಳನ್ನು ವಿತರಿಸಿ ಮಾತನಾಡಿ, ದಿನನಿತ್ಯದ ಆಹಾರ ಪದಾರ್ಥಗಳಿಗೂ ಕಷ್ಟ ಪಡುತ್ತ ಜೀವನ ನಡೆಸುತ್ತಿರುವವರಿಗೆ ಹಾಗೂ ಅಗತ್ಯ ಇರುವವರಿಗೆ ನೆರವು ನೀಡುವುದು ಜೆಸಿ ಸಂಸ್ಥೆಯ ಮುಖ್ಯ ಆಶಯವಾಗಿದೆ ಎಂದು ತಿಳಿಸಿದರು.
ಜೆಸಿಐ ಸಂಸ್ಥೆ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಜೆಸಿಐ ಸಪ್ತಾಹದ ಪ್ರಯುಕ್ತ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಗುಡ್ಲಕ್ ಆರೈಕೆ ಕೇಂದ್ರವು ಉತ್ತಮ ಕೆಲಸ ಮಾಡುತ್ತಿದ್ದು, ನಮ್ಮ ಸಂಸ್ಥೆಯು ಇಲ್ಲಿರುವವರಿಗೆ ಆಹಾರ ಕಿಟ್ ವಿತರಿಸುವ ಕಾರ್ಯ ನಡೆಸಿದೆ ಎಂದರು.
ಗುಡ್ಲಕ್ ಆರೈಕೆ ಕೇಂದ್ರವು ವೃದ್ಧರು, ಹಿರಿಯರು, ಅನಾಥರು, ಪಾರ್ಶ್ವವಾಯು ಪೀಡಿತರು ಸೇವೆಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಲು ಮುಂದಾಗಬೇಕು. ಇದರಿಂದ ಇಲ್ಲಿರುವವರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ ಸುನೀಲ್ ನೇತೃತ್ವದಲ್ಲಿ ಸದಸ್ಯರು ಗುಡ್ಲಕ್ ಆರೈಕೆ ಕೇಂದ್ರದಲ್ಲಿರುವ ವೃದ್ಧರು, ಅನಾಥರು, ಬುದ್ದಿಮಾಂದ್ಯರಿಗೆ ಆಹಾರ ಕಿಟ್ಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ಉಪಾಧ್ಯಕ್ಷೆ ಮಂಜುಳಾ ರವಿ ಜನ್ಮದಿನ ಅಚರಿಸಲಾಯಿತು.
ಆಹಾರ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಲೇಡಿ ಜೆಸಿ ಕೋ ಆರ್ಡಿನೇಟರ್ ಶಾರದಾ ಶೇಷಗಿರಿ ಗೌಡ, ಕಾರ್ಯದರ್ಶಿ ಕವಿತಾ ಜೋಯಿಸ್, ಉಪಾಧ್ಯಕ್ಷರಾದ ವಂದನ, ಕಲ್ಪನಾ ಹಾಗೂ ಭಾಗ್ಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.