ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಐಐಎಫ್ ರಾಷ್ಟ್ರೀಯ ಅಧ್ಯಕ್ಷರಾಗಿ ಡಿ.ಎಸ್.ಚಂದ್ರಶೇಖರ್ ಅಧಿಕಾರ ಸ್ವೀಕಾರ

ಶಿವಮೊಗ್ಗ: ದೇಶದಲ್ಲಿ ಫೌಂಡ್ರಿ ಉದ್ಯಮ ಮತ್ತಷ್ಟು ವಿಸ್ತರಿಸುವ ದೃಷ್ಠಿಯಿಂದ ಜವಾಬ್ದಾರಿಯುತ ಪ್ರಯತ್ನ ನಡೆಸಲಾಗುವುದು. ಬರುವ ದಿನಗಳಲ್ಲಿ ಅತ್ತ್ಯುತ್ತಮ ನಿರ್ಧಾರಗಳ ಮೂಲಕ ಫೌಂಡ್ರಿ ಉದ್ಯಮಕ್ಕೆ ಹೆಚ್ಚಿನ ಸೇವೆ ಒದಗಿಸುವ ವಿಶ್ವಾಸವಿದೆ ಎಂದು ಐಐಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಹೇಳಿದರು.
ಶಿವಮೊಗ್ಗ ನಗರದ ಕಿಮ್ಮನೆ ಗಾಲ್ಫ್ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಐಐಎಫ್ ಸರ್ವ ಸದಸ್ಯರ ಸಭೆಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಫೌಂಡ್ರಿ ಉದ್ಯಮ ದೇಶಾದ್ಯಂತ ಬಲಿಷ್ಠವಾಗಿ ಬೆಳೆಯುವಲ್ಲಿ ಐಐಎಫ್ ಸಂಸ್ಥೆಯ ಹಿಂದಿನ ಎಲ್ಲ ಅಧ್ಯಕ್ಷರು, ಸದಸ್ಯರ ಅಪಾರ ಶ್ರಮ ಇದ್ದು, ಪ್ರತಿ ವರ್ಷ ಮೆಗಾ ಕಾರ್ಯಕ್ರಮಗಳ ಮೂಲಕ ಫೌಂಡ್ರಿ ಉದ್ಯಮ ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಐಐಎಫ್ ಸಂಸ್ಥೆಯ ಸದಸ್ಯರ ಸಂಖ್ಯೆ 5000 ಗುರಿ ತಲುಪಿಸುವ ಉದ್ದೇಶವಿದ್ದು, ದಕ್ಷಿಣ ವಲಯ ಸೇರಿದಂತೆ ಎಲ್ಲ ವಲಯಗಳಲ್ಲೂ ಉತ್ತಮ ಪ್ರಯತ್ನ ನಡೆಯುತ್ತಿದೆ. ಬರುವ ವರ್ಷಗಳಲ್ಲಿ ಸದಸ್ಯರ ಸಂಖ್ಯೆ 5000 ದಾಟುವ ಭರವಸೆಯಿದೆ. ಸಂಸ್ಥೆಯು ಎಲ್ಲ ಸದಸ್ಯರ ಸಹಕಾರ ಮುಖ್ಯ ಎಂದರು.
“ವಿ ಕಾಸ್ಟ್” ಥೀಮ್ ಆಶಯದೊಂದಿಗೆ ಐಐಎಫ್ ಕಾರ್ಯ ನಿರ್ವಹಿಸಲಿದ್ದು, ಹೊಸ ತಂತ್ರಜ್ಞಾನದ ಸಂಪೂರ್ಣ ಬಳಕೆ ಮಾಡಿಕೊಳ್ಳಲಾಗುವುದು. ದೇಶಾದ್ಯಂತ ಎಲ್ಲ ಫೌಂಡ್ರಿ ಉದ್ಯಮಿಗಳಿಗೆ ಹಾಗೂ ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಸೂಕ್ತ ಮಾರ್ಗದರ್ಶನ, ವಿಶೇಷ ತರಬೇತಿ ಉಪನ್ಯಾಸಗಳು, ಮೆಗಾ ಕಾರ್ಯಕ್ರಮಗಳ ಮೂಲಕ ಉದ್ಯಮಕ್ಕೆ ಶಕ್ತಿ ತುಂಬುವ ಕಾರ್ಯ ನಡೆಸಲಾಗುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಶಿವಮೊಗ್ಗದ ಡಿ.ಎಸ್.ಚಂದ್ರಶೇಖರ್ ಅವರು ಐಐಎಫ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವುದು ಅತ್ಯಂತ ಸಂತೋಷದ ಸಂಗತಿ. ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 2024ರ ಫೆಬ್ರವರಿ 2, 3 ಮತ್ತು 4 ರಂದು 72ನೇ ಇಂಡಿಯನ್ ಫೌಂಡ್ರಿಮೆನ್ ಕಾಂಗ್ರೆಸ್ ಮತ್ತಯ ಅಂತರಾಷ್ಟ್ರೀಯ ಫೌಂಡ್ರಿ ವಸ್ತುಗಳ ಪ್ರದರ್ಶನ ಆಯೋಜಿಸಿದ್ದು, ದೇಶಾದ್ಯಂತ ಇರುವ ಎಲ್ಲ ಫೌಂಡ್ರಿ ಉದ್ಯಮಿಗಳು ಪಾಲ್ಗೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ವಿದೇಶದ ಫೌಂಡ್ರಿ ಉದ್ಯಮದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಐಐಎಫ್ ಸರ್ವ ಸದಸ್ಯರ ಸಭೆಯಲ್ಲಿ ಕೊಯಮತ್ತೂರಿನ ಮುತ್ತುಕುಮಾರ್.ಎಸ್. ಗೌರವ ಕಾರ್ಯದರ್ಶಿಯಾಗಿ, ನಾಗಪುರದ ಸುಶೀಲ್ ಶರ್ಮಾ ಖಜಾಂಚಿಯಾಗಿ ಅಧಿಕಾರ ವಹಿಸಿಕೊಂಡರು. ಶಿವಮೊಗ್ಗದ ವಿಜಯ್ ಟೆಕ್ನೋಕ್ರ್ಯಾಟ್ಸ್‌ನ ಡಿ.ಜಿ.ಬೆನಕಪ್ಪ, ಪಿಯರ್ ಲೈಟ್ ಲೈನರ್ಸ್‌ನ ಅಂಕಿತ್ ಎಸ.ದಿವೇಕರ್, ಶ್ರೇಯೋನಿಧಿ ಎಂಟರ್‌ಪ್ರೈಸ್‌ ಜಿ.ವಿ.ಕಿರಣ್‌ಕುಮಾರ್ ಐಐಎಫ್ 2023-25 ಸಾಲಿನ ರಾಷ್ಟ್ರೀಯ ಕೌನ್ಸಿಲ್‌ಗೆ ಚುನಾಯಿತರಾಗಿದ್ದಾರೆ.
ದೇಶದ 15 ರಾಜ್ಯಗಳ ನೂರಾರು ಫೌಂಡ್ರಿ ಸದಸ್ಯರು ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡಿದ್ದರು. ಐಐಎಫ್ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ವಿನಿತ್ ಜೈನ್, ನಿಕಟಪೂರ್ವ ಕಾರ್ಯದರ್ಶಿ ದಿನೇಶ್ ಗುಪ್ತಾ, ನಿಕಟಪೂರ್ವ ಖಜಾಂಚಿ ಎಸ್.ಕುಪ್ಪಸ್ವಾಮಿ, ಐಐಎಫ್ ಮಾಜಿ ಅಧ್ಯಕ್ಷ ದೇವೆಂದ್ರ ಜೈನ್, ಡಾ. ಅಭಿಷಿಕ್ತ ಚೌದರಿ ಮತ್ತಿತರರು ಉಪಸ್ಥಿತರಿದ್ದರು. ಐಐಎಫ್ ಶಿವಮೊಗ್ಗ ಘಟಕದ ಪದಾಧಿಕಾರಿಗಳು ಹಾಜರಿದ್ದರು.

Related posts

ಇಡೀ ದೇಶದ ಜನರ ಮತ್ತು ಪಕ್ಷದ ಕಾರ್ಯಕರ್ತರ ಭರವಸೆಯನ್ನು ರಾಜ್ಯದ ಫಲಿತಾಂಶ ಹೆಚ್ಚಿಸಿದೆ-ಸರ್ವ ಸದಸ್ಯರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ  ನುಡಿ.

ವಿಶ್ವ ವಿಖ್ಯಾತ ಮೈಸೂರು ದಸರಾ: ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ.

ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರ ಅಧಿಕಾರ ಅವಧಿ 5 ವರ್ಷ ವಿಸ್ತರಣೆಗೆ ಚಿಂತನೆ.