ಕನ್ನಡಿಗರ ಪ್ರಜಾನುಡಿ
ಕ್ರೈಮ್ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಸೈಕಲ್ ಕದ್ದಿದ್ದ ಕಳ್ಳ ಬರೊಬ್ಬರಿ 38 ವರ್ಷದ ಬಳಿಕ ಸಿಕ್ಕಿಬಿದ್ದ: ಪೊಲೀಸರು ಕಾರ್ಯಾಚರಣೆ ನಡೆಸಿದ್ದೇ ರೋಚಕ.

ಬೆಂಗಳೂರು: ತಾನು 22 ವರ್ಷದ ಯುವಕನಾಗಿದ್ದಾಗ ಬೈಸಿಕಲ್ ಕದ್ದಿದ್ದ ಕಳ್ಳನೊಬ್ಬ ಇದೀಗ 38 ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಹೌದು ಇತ್ತೀಚೆಗೆ ಬೆಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹೌದು.. ಪಾಷಾ ಜಾನ್ ಎಂಬ ವ್ಯಕ್ತಿಯೇ ಸೈಕಲ್ ಕದ್ದು 38 ವರ್ಷದ ಬಳಿಕ ಸಿಕ್ಕಿಬಿದ್ದ ಆರೋಪಿ.  ಪಾಷಾ ಜಾನ್  1985 ರಲ್ಲಿ 22 ವರ್ಷ ವಯಸ್ಸಿನವನಾಗಿದ್ದಾಗ ಸೈಕಲ್ ಕದ್ದಿದ್ದರು. ಕಳ್ಳತನ ಮಾಡಿದ ಒಂದೇ ತಿಂಗಳಿಗೆ ಅವರನ್ನು ಕೆಜಿಎಫ್ ನಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜಾಮೀನು ಮಂಜೂರು ಮಾಡಲಾಗಿತ್ತು. ಆದರೆ ಈಗ ಅವರನ್ನು ಮತ್ತೆ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

38 ವರ್ಷಗಳ ನಂತರ, ಈಗ ಪಾಷಾ ಜಾನ್ ಅವರಿಗೆ 60 ವರ್ಷ ತುಂಬಿದೆ. ಪಾಷಾ ಜಾನ್ ತಮ್ಮ ಜೀವನಕ್ಕಾಗಿ ಆಟೋರಿಕ್ಷಾ ಓಡಿಸುತ್ತಾರೆ. 1985 ರಿಂದ ಪಾಷಾ ಜಾನ್ ಅವರ ಹೆಸರಿನಲ್ಲಿ ಸುಮಾರು 200 ವಾರಂಟ್ ಗಳನ್ನು ಹೊರಡಿಸಿರಬಹುದು ಎಂದು ನಗರ ವಕೀಲರೊಬ್ಬರು ತಿಳಿಸಿದ್ದಾರೆ. ಜಾನ್ ಅವರು ಕೆಲವು ವರ್ಷಗಳ ಹಿಂದೆ ಕೆಜಿಎಫ್ನಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಈ ಹಿನ್ನೆಲೆ ಅವರನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.

ಇನ್ನು ಜುಲೈ ತಿಂಗಳಲ್ಲಿ ಬೆಂಗಳೂರಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಎಲ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ರಕರಣಗಳನ್ನು ಕ್ಲಿಯರ್ ಮಾಡುವಂತೆ ಹಿರಿಯ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆ ದೂಳು ತುಂಬಿದ್ದ ಹಳೆಯ ಫೈಲ್ ಗಳನ್ನು ನೋಡಲಾರಂಭಿಸಿದೆ. ಆಗ ಅತ್ಯಂತ ಹಳೆಯ ಪ್ರಕರಣ ಕೈ ಸೇರಿತು. ಆರೋಪಿ ನಾಪತ್ತೆ ಹಿನ್ನೆಲೆ ಪ್ರಕರಣ ವಿಚಾರಣೆ ಹಂತದಲ್ಲಿಯೇ ಉಳಿದಿತ್ತು. ಆಗ ನಾನು ನನ್ನ ತಂಡಕ್ಕೆ ಆರೋಪಿಯನ್ನು ಪತ್ತೆ ಹಚ್ಚುವಂತೆ ಸೂಚಿಸಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.

ಬಳಿಕ ಮೂವರ ತಂಡವನ್ನು ರಚಿಸಿ ಆರೋಪಿಯ ಪತ್ತೆಗೆ ಕಾರ್ಯಾಚರಣೆ ಶುರು ಮಾಡಲಾಯಿತು. ಜಾನ್ ಇರುವ ಬಗ್ಗೆ ಮಾಹಿತಿ ತಿಳಿಯಲು ಪೊಲೀಸರು ಅವರ ಸಂಬಂಧಿಕರನ್ನು ಪತ್ತೆ ಮಾಡಿ ಹಿಂಬಾಲಿಸಿದರು. ಬಳಿಕ ಸಂಬಂಧಿಕರೊಬ್ಬರು ಜಾನ್ ಕೆಆರ್ ಪುರಂನಲ್ಲಿ ನೆಲೆಸಿರುವುದಾಗಿ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರ ತಂಡ ಜಾನ್ ಪತ್ತೆ ಮಾಡಿದೆ.

ಪೊಲೀಸರು ಜಾನ್ ಮನೆಗೆ ತೆರಳಿ ಜಾನ್ನನ್ನು ಹಿಡಿದಿದ್ದಾರೆ. ಈ ವೇಳೆ ಗಾಬರಿಗೊಂಡ ಜಾನ್, ನೀವು ತಪ್ಪು ವ್ಯಕ್ತಿಯನ್ನು ಬಂಧಿಸಿದ್ದೀರಿ. ನಾನೇನು ಮಾಡಿಲ್ಲ ಎಂದು ವಾದ ಮಾಡಿದ್ದಾರೆ. ಈ ವೇಳೆ ಪೊಲೀಸರ ತಂಡವು ಜಾನ್ ಅವರ ಬೆರಳಚ್ಚುಗಳನ್ನು ಸಂಗ್ರಹಿಸಿ ಆರೋಪಿ ಎಂದು ಸಾಭೀತಾಗಿದ್ದು ಜಾನ್ರನ್ನು ಬಂಧಿಸಿದ್ದಾರೆ. 1985 ರಲ್ಲಿ ಬೈಸಿಕಲ್ ಕಳ್ಳತನ ಮಾಡಿದ್ದ ಜಾನ್ ಅವರನ್ನು ಈಗ ಪೊಲೀಸರು ಬಂಧಿಸಿದ್ದಾರೆ.

 

Related posts

ಇ-ಪ್ರೊಕ್ಯೂರ್ ಮೆಂಟ್ 2.0 ಪೋರ್ಟಲ್ ಹಾಗೂ ಡಿಐಎಸ್ ತಂತ್ರಾಂಶ ಲೋಕಾರ್ಪಣೆ.

ರಾಜ್ಯದ ಎರಡು ಕಡೆ ಆರ್ & ಡಿ ಕೇಂದ್ರ ತೆರೆಯಲು ಆಪ್ಟೀವ್ ಕಂಪನಿಗೆ ಆಹ್ವಾನ.

ಅಮೆರಿಕದಲ್ಲಿ ಅತಿದೊಡ್ಡ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಾಣ: ಅನಾವರಣಕ್ಕೆ ಸಜ್ಜು.