ಶಿವಮೊಗ್ಗ: ಸರಕು ವಾಹನಗಳಿಗೆ ಆಜೀವ ತೆರಿಗೆ ಪಾವತಿಸುವ ಬದಲು ಈ ಹಿಂದಿನಂತೆ ತ್ರೈಮಾಸಿಕ ತೆರಿಗೆ ಪಾವತಿಸಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಮಿನಿ ಲಾರಿ ಮಾಲೀಕರ ಸಂಘದ ವತಿಯಿಂದ ಆರ್ಟಿಒ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಹಿಂದೆ ಸರಕು ವಾಹನಗಳಿಗೆ ತ್ರೈಮಾಸಿಕ ತೆರಿಗೆಯನ್ನು (ಮೂರು ತಿಂಗಳಿಗೊಮ್ಮೆ) ಎರಡು ಸಾವಿರ ರೂ. ತೆರಿಗೆ ಪಾವತಿಸಲಾಗುತ್ತಿತ್ತು. ಆದರೆ ಹಾಲಿ ತ್ರೈಮಾಸಿಕ ತೆರಿಗೆ ಪಾವತಿಸುವ ಬದಲು ಆಜೀವ ತೆರಿಗೆ ಪಾವತಿಸಲು ಸರ್ಕಾರ ಆದೇಶಿಸಿದೆ. ಇದರಿಂದ ಪ್ರತಿ ಲಾರಿ ಮಾಲೀಕರು 2 ವರ್ಷದ ಹಳೆಯ ಲಾರಿಗೆ 95ಸಾವಿರ ರೂ. ಮತ್ತು 15 ವರ್ಷದ ಹಳೆಯ ವಾಹನಗಳಿಗೆ 45 ಸಾವಿರ ರೂ. ಪಾವತಿಸಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ
ಈ ಬಗ್ಗೆ ಲಾರಿ ಮಾಲೀಕರಿಗೆ ಯಾವುದೇ ಮುನ್ಸೂಚನೆ ನೀಡದೆ ಯಾವುದೇ ಮಾಹಿತಿ ನೀಡದೆ ಆದೇಶಿಸಲಾಗಿದ್ದು, ಇದರಿಂದ ಆರ್ಟಿಒ ಕಚೇರಿಯಲ್ಲಿ ತ್ರೈಮಾಸಿಕ ತೆರಿಗೆ ಪಾವತಿಸಲು ನಿರಾಕರಿಸಲಾಗುತ್ತಿದೆ. ಹೀಗಾಗಿ ಲಾರಿ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಆಜೀವ ತೆರಿಗೆ ಪಾವತಿ ಮಾಡಲು ಮಿನಿ ಲಾರಿ ಮಾಲೀಕರಿಗೆ ಆರ್ಥಿಕ ಹೊರೆಯಾಗುತ್ತದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸರಕು ವಾಹನಗಳಿಗೆ ಈ ಹಿಂದಿನಂತೆ ತೆರಿಗೆ ಪಾವತಿಸಲು ಅನುವು ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜ್ಯೋತಿಪ್ರಕಾಶ್, ಕಾರ್ಯದರ್ಶಿ ಕೆ.ಎನ್. ಬೋಸ್ರಾಜ್, ಆಸೀಫ್, ಮುನ್ನಾ, ಬಾಲು, ಅಬ್ದುಲ್ ಖಲೀಂ, ಶ್ರೀನಿವಾಸ್ ಮೊದಲಾದವರಿದ್ದರು.