ಬೆಂಗಳೂರು: 100ಕ್ಕೂ ಹೆಚ್ಚು ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸುತ್ತೇವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ಮೋಡ ಬಿತ್ತನೆ ಬಗ್ಗೆ ಚಿಂತನೆಯಿಲ್ಲ, ಅದರಿಂದ ಪ್ರಯೋಜನವಾಗಿಲ್ಲ. ಈ ಹಿಂದೆ ಮೋಡ ಬಿತ್ತನೆ ಮಾಡಿದಾಗ ಪ್ರಯೋಜನವಾಗಿರಲಿಲ್ಲ ಎಂದು ತಿಳಿಸಿದರು.
ಬರಗಾಲ ಎಂದು ಘೋಷಿಸಲು ಮಾರ್ಗಸೂಚಿ ಪಾಲಿಸಬೇಕು. ರಾಜ್ಯದಲ್ಲಿ ಬರದ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದೆ. ಆದರೆ ಮಾರ್ಗಸೂಚಿ ಅಡ್ಡಿಪಡಿಸುತ್ತಿರುವುದರಿಂದ ಬರಪೀಡಿತ ಘೋಷಣೆ ಮಾಡಲು ಆಗಿಲ್ಲ ಎಂದರು.
1.43 ಲಕ್ಷ ಹೆಕ್ಟರ್ ಹತ್ತಿ ಕೊರತೆ ಇದೆ. 1.8 ಲಕ್ಷ ಹೆಕ್ಟೆರ್ ತೊಗರಿ ಕೊರತೆ ಇದೆ. ಪ್ರತಿ ತಾಲ್ಲೂಕಿನ 10ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಹೀಗಾಗಿ ನೋಡಲ್ ಅಧಿಕಾರಿಗಳನ್ನ ನೇಮಿಸಲಾಗಿದೆ ಪ್ರತಿಜಿಲ್ಲೆಗೂ ನೋಡಲ್ ಅಧಿಕಾರಿ ಭೇಟಿ ನೀಡಲಿದ್ದಾರೆ. ನಾನೂ ಕೂಡ ಜಿಲ್ಲಾವಾರು ಭೇಟಿ ಮಾಡುತ್ತೇನೆ ಎಂದು ಚಲುವರಾಯಸ್ವಾಮಿ ತಿಳಿಸಿದರು.