ನವದೆಹಲಿ: ನೆಹರೂ ಮ್ಯೂಸಿಯಂ ಅನ್ನು ಪ್ರಧಾನಿ ಮ್ಯೂಸಿಯಂ ಎಂದು ಮರುನಾಮಕರಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರದ ಬಗ್ಗೆ ಕಾಂಗ್ರೆಸ್ ತುಂಬಾ ಆಕ್ರಮಣಕಾರಿಯಾಗಿದ್ದು, ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೆಹರೂ ಅವರು ಕೇವಲ ಅವರ ಹೆಸರಿನಿಂದ ಅಲ್ಲ, ಅವರ ಕೆಲಸದಿಂದ ಪರಿಚಿತರಾಗಿದ್ದಾರೆ ಎಂದು ಹೇಳಿದ್ದಾರೆ.
ವಿವಾದದ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ವಾಗ್ಯುದ್ಧದ ಒಂದು ದಿನದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜವಾಹರಲಾಲ್ ನೆಹರೂ ಅವರ ದೈತ್ಯ ಕೊಡುಗೆಗಳನ್ನು ಎಂದಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದರು.
ಆಗಸ್ಟ್ 14ರಂದು ತೀನ್ಮೂರ್ತಿಯಲ್ಲಿರುವ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಅಧಿಕೃತವಾಗಿ ಪ್ರಧಾನ ಮಂತ್ರಿ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಬದಲಾಯಿಸಲಾಯಿತು.
ಕಾಂಗ್ರೆಸ್ ಟೀಕೆ ನಡುವೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಜೆಪಿ, ವಸ್ತುಸಂಗ್ರಹಾಲಯವು ನೆಹರೂ ಅವರ ಮೇಲೆ ಕೇಂದ್ರೀಕರಿಸಿಲ್ಲ. ಇದುವರೆಗಿನ ಎಲ್ಲಾ ಪ್ರಧಾನಿಗಳ ಇತಿಹಾಸವನ್ನು ಕೇಂದ್ರೀಕರಿಸಿದೆ. ಆದರೆ ಇದಕ್ಕೂ ಮೊದಲು ಬೇರೆ ಯಾವುದೇ ಪ್ರಧಾನಿಗಳಿಗೆ ಸ್ಥಾನವಿಲ್ಲ ಎಂದು ಹೇಳಿದೆ.