ಬೆಂಗಳೂರು: ಅನೇಕ ಸ್ವಾತಂತ್ರ ಹೋರಾಟಗಾರರು ತಮ್ಮ ಯೌವನದ ದಿನಗಳನ್ನು ಕತ್ತಲೆಯಲ್ಲಿ ಕಳೆದರು. ನಾಡಿಗೆ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಸ್ವಾತಂತ್ರವನ್ನು ತಂದು ಕೊಟ್ಟಿದ್ದಾರೆ. ಸ್ವಾತಂತ್ರ ಹೋರಟಗಾರರ ಕೊಡುಗೆಯ ಫಲವಾಗಿ ಸ್ವಾತಂತ್ರ್ಯವನ್ನು ನಾವು ಇವತ್ತು ಅನುಭವಿಸುತ್ತಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ಪಟ್ಟರು.
ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ೭೭ನೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಭಾರತ ಮಾತೆಗೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ನಮ್ಮ ಹಿರಿಯರು ಸಾಕಷ್ಟು ತ್ಯಾಗವನ್ನು ಮಾಡಿದ್ದಾರೆ. ಶಾಂತಿ, ಅಹಿಂಸೆ ಹಾಗೂ ಅಧ್ಯಾತ್ಮಿಕ ಕ್ರಾಂತಿಯ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಇಂದು ನಾವು ಅದನ್ನು ಸಂತೋಷದಿಂದ ಅನುಭವಿಸುತ್ತಿದ್ದೇವೆ. ನಮ್ಮ ದೇಶದ ಅಭ್ಯುದಯದ ಕನಸು ಕಂಡವರ ಕನಸನ್ನು ನಾವೆಲ್ಲಾ ನನಸು ಮಾಡುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ. ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರ ಎಂದು ತಿಳಿಯಲೇ ಬಾರದು. ಬದಲಿಗೆ ಅದು ನಮ್ಮ ದೇಶವನ್ನು ನಾವು ಕಾಪಾಡಿಕೊಂಡು ಅಭಿಮಾನದಿಂದ ಇರುವ ಜವಾಬ್ದಾರಿ ಎಂದು ನಾಡೋಜ ಡಾ, ಮಹೇಶ ಜೋಶಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ, ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು, ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ. ಎನ್. ಎಸ್. ಶ್ರೀಧರ ಮೂರ್ತಿ, ವಿಶೇಷ ಕರ್ತವ್ಯಾಧಿಕಾರಿ ಶ್ರೀ ಚಿಕ್ಕತಿಮ್ಮಯ್ಯ ಸಿ. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ಭಾಗವಹಿಸಿದ್ದರು.