ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಜನಶಕ್ತಿಯ ಮುಂದೆ ಯಾವುದೇ ಶಕ್ತಿ ನಿಲ್ಲಲಾಗದು : ಜಿ.ಎಸ್.ನಾರಾಯಣರಾವ್

ಶಿವಮೊಗ್ಗ : ಜನಶಕ್ತಿಯ ಮುಂದೆ ಯಾವುದೇ ಶಕ್ತಿ ನಿಲ್ಲಲಾಗದಂತಹ ಅದ್ಭುತ ಪ್ರಜಾತಂತ್ರ ವ್ಯವಸ್ಥೆ ಭಾರತದಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ವತಿಯಿಂದ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ 77 ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮವನ್ನು ಧ್ವಜಾರೋಹಣಗೊಳಿಸಿ ಮಾತನಾಡಿದರು.
ವಿಶ್ವದಲ್ಲೇ ಅತಿ ದೊಡ್ಡ ಜನಶಕ್ತಿ ಹೊಂದಿರುವ ರಾಷ್ಟ್ರ ಭಾರತ. ಇದರ ಜೊತೆಯಲ್ಲಿ ಪ್ರಬಲವಾದ ಪ್ರಜಾತಂತ್ರ ವ್ಯವಸ್ಥೆಯಿದೆ. ಲೋಕಸಭೆಯಿಂದ ಗ್ರಾಮ ಪಂಚಾಯತಿವರೆಗೆ ಕಾಲಕಾಲಕ್ಕೆ ಚುನಾವಣೆಗಳು ನಡೆಯುತ್ತಿರುವುದರ ಮೂಲಕ ಪಟ್ಟಣದಿಂದ ಗ್ರಾಮೀಣ ಭಾಗದವರೆಗಿನ ಅಭಿವೃದ್ಧಿಗಳಿಗೆ ಪೂರಕವಾದ ಎಲ್ಲಾ ಅಂಶಗಳು ಅತ್ಯದ್ಭುತವಾಗಿ ನಡೆಯುತ್ತಿದೆ.
ದೇಶದ ಸ್ವಾತಂತ್ರಕ್ಕಾಗಿ ಮಡಿದವರ ತ್ಯಾಗ ಬಲಿದಾನ ನೀಡಿದವರನ್ನು ಸ್ಮರಿಸಿಕೊಳ್ಳಬೇಕಾದದ್ದು ನಮ್ಮ ಆದ್ಯತೆಯ ಕರ್ತವ್ಯ. 77 ವರ್ಷಗಳಲ್ಲಿ ದೇಶ ಅನೇಕ ಅಭಿವೃದ್ಧಿ ಪಥಗಳನ್ನು ಕಂಡಿದೆ. ಹಸಿರು, ವಿಜ್ಞಾನ, ರಕ್ಷಣೆ, ಶಿಕ್ಷಣ ಸೇರಿದಂತೆ ಎಲ್ಲಾ ರಂಗಗಳಲ್ಲಿ ಕ್ರಾಂತಿಯನ್ನು ಸಾಧಿಸಿದೆ ಎಂದು ಹೇಳಿದರು.
ಇಂದಿನ ಬದಲಾದ ಕಾಲಮಾನದಲ್ಲಿ ರಾಜಕಾರಣದ ಮೂಲ ಗುರಿ ಅಧಿಕಾರವಾಗಿದೆ. ರಾಜಕಾರಣದ ಮುಂದೆ ಸಾಮಾಜಿಕ ಮೌಲ್ಯಗಳನ್ನು ಕಳೆದುಕೊಂಡಿದ್ದು, ಗುಣಮಟ್ಟದ ನಾಯಕತ್ವದ ಕೊರತೆ ಇದೆ.  ಇಂದು ನಮಗೆ ಆರೋಗ್ಯವಂತ ರಾಜಕೀಯ ವ್ಯವಸ್ಥೆ ಬೇಕಾಗಿದೆ.‌ ಆಡಳಿತ ನಡೆಸುವವರಲ್ಲಿ ಮತ್ಸರತನಕ್ಕಿಂತ ಮುತ್ಸದ್ದಿತನಬೇಕಾಗಿದೆ.
ನಿಸ್ವಾರ್ಥ ಆಡಳಿತವಿರುವ ಕಡೆ ಭಯ ಭಕ್ತಿ ಸದಾ ಇರುತ್ತದೆ. ಕೃತಕವಾಗಿ ನಿರ್ಮಾಣವಾಗುವ ಭಯ ಭಕ್ತಿ ಕ್ಷಣಿಕ ಮಾತ್ರ. ವ್ಯಕ್ತಿಯ ಆಕರ್ಷಣೆ ಬೇಗ ಅಳಿಯುತ್ತೆ, ವ್ಯಕ್ತಿತ್ವದ ಆದರ್ಶ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಅಂತಹ ಆದರ್ಶಯುತ ಸಮಾಜ ನಿರ್ಮಾಣ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಹೆಚ್.ಸಿ.ಶಿವಕುಮಾರ್, ಮಧುರಾವ್, ಎನ್.ಟಿ.ನಾರಾಯಣರಾವ್, ಎಂ.ಜಿ.ರಾಮಚಂದ್ರಮೂರ್ತಿ, ಅಜೀವ ಸದಸ್ಯರಾದ ಆನಂದ್, ಗುರುಪ್ರಸಾದ್, ಕಿಶೋರ ಶೀರನಾಳಿ, ಕುಲಸಚಿವರಾದ ಪ್ರೊ. ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Related posts

900 ಹೆಣ್ಣು ಭ್ರೂಣಗಳ ಹತ್ಯೆ: ಇಬ್ಬರು ವೈದ್ಯರು ಸೇರಿ 9 ಮಂದಿ ಅಂದರ್.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ವರ್ಗಾವಣೆಗೆ ಖಂಡನೆ.

ಶಾಲೆಗಳಲ್ಲಿ ಶಿಕ್ಷಕರೂ ಸಹ ಮೊಬೈಲ್ ಫೋನ್ ಬಳಸುವಂತಿಲ್ಲ.