ಶಿವಮೊಗ್ಗ: ಗೋಪಾಳ ಗ್ರಾಮದ ಸರ್ವೆ ನಂ. 49ರ ಸರ್ಕಾರಿ `ಬಿ’ ಖರಾಬು ಆದಿ ರಂಗನಾಥ ದೇವರ ಜಾಗದ ನಕಲಿ ಹಕ್ಕುಪತ್ರ ರದ್ದುಪಡಿಸಲು ಕೆಡಿಪಿ ಸಭೆಯಲ್ಲಿ ತೀರ್ಮಾನಿಸಿ ಈ ತೀರ್ಮಾನದ ಸುತ್ತೋಲೆ ಹೊರಡಿಸಬೇಕೆಂದು ಆಗ್ರಹಿಸಿ ಗೋಪಾಳದ ಭೂ ಸಂರಕ್ಷಣಾ ಸಮಿತಿ ವತಿಯಿಂದ ಇಂದು ಜಿ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿ ಸಿಇಒ ಅವರಿಗೆ ಮನವಿ ಸಲ್ಲಿಸಲಾಯಿತು.
ಒಪ್ಪಿಗೆ ಪಡೆಯದೆ ದೇವಸ್ಥಾನದ ಜಾಗವನ್ನು 1993ರಿಂದ 95ರಲ್ಲಿ 182 ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡಿದ್ದು, ಈ ನಕಲಿ ಹಕ್ಕುಪತ್ರವನ್ನು ರದ್ದುಪಡಿಸಬೇಕು. ಪುರಾತನ ಕಾಲದ 11ನೇ ಶತಮಾನದಲ್ಲಿ ಇತಿಹಾಸ ಪ್ರಸಿದ್ಧ ಹೊಯ್ಸಳ ಕಾಲದ ಆದಿರಂಗನಾಥ ದೇವರು ಗೋಪಾಳದಲ್ಲಿ ಸ್ಥಾಪಿತವಾಗಿದ್ದು, 22ಎಕರೆ 13 ಗುಂಟೆ ದೇವಸ್ಥಾನದ ಜಾಗವಿತ್ತು. ಇದರಲ್ಲಿ ಎಲ್ಲಾ ಗೇಣಿದಾರರಿಗೆ ಇನಾಮು ಜಮೀನು ಮಂಜೂರಾಗಿತ್ತು. ಇದರಲ್ಲಿ 5ಎಕರೆ 13 ಗುಂಟೆ ಖರಾಬು ಜಾಗದಲ್ಲಿ ಆದಿರಂಗನಾಥ ಸ್ವಾಮಿ ದೇವಸ್ಥಾನವಿದೆ. ಈ ಜಾಗ ಉಳಿವಿಗಾಗಿ ಗೋಪಾಳ ಗ್ರಾಮದ ಗ್ರಾಮಸ್ಥರು 2017-18ರಲ್ಲಿ ಹೋರಾಟ ಮಾಡಿದ ಪರಿಣಾಮ ಖರಾಬು ಬಾಬ್ತು ನಕ್ಷೆ ಎಂದು ಗುರುತಿಸಿ ಪ್ರಸ್ತುತ ಜಾಗ ಖಾಲಿ ಇದೆ.
ಸುಬ್ಬಣ್ಣ ಬಿನ್ ಗಣೇಶ್ ರಾವ್ ಎಂಬುವರು 2008ರಲ್ಲಿ ನನ್ನ ಖಾತೆ ಗಾಡಿಕೊಪ್ಪ ಮಂಡಲ ಪಂಚಾಯಿತಿಯಲ್ಲಿ ಇದ್ದು, ನಗರಸಭೆ ಖಾತೆ ಮಾಡಲು ಅರ್ಜಿ ಸಲ್ಲಿಸಿದ ಪರಿಣಾಮ 2010-11ರಲ್ಲಿ ಆಸ್ತಿ ವರ್ಗಾವಣೆ ಮಾಡಿದ್ದಾರೆ. ಅಕ್ರಮವಾಗಿ ಆಸ್ತಿ ವರ್ಗಾವಣೆ ಮಾಡಿದ್ದಕ್ಕಾಗಿ ನಗರಭೆಯ ಅಂದಿನ ಪೌರಾಯುಕ್ತರಾಗಿದ್ದ ಈಗ ನಿವೃತ್ತರಾಗಿರುವ ಬಿ. ಜಯಣ್ಣ, ಸಹಾಯಕ ಕಂದಾಯಾಧಿಕಾರಿ ವಿ. ಜಗನ್ನಾಥ ರಾವ್ ಹಾಗೂ ಪ್ರಥಮ ದರ್ಜೆ ಕಂದಾಯ ನಿರ್ದೇಶಕ ಎಸ್.ರವಿಕುಮಾರ್ ಅವರನ್ನು ಅಮಾನತು ಪಡಿಸಬೇಕಿತ್ತು. ಸರ್ವೆ ನಂ 49ರ ನಾಲ್ಕು ಎಕರೆ ಖಾಸಗಿ ಜಮೀನಿನಲ್ಲಿ 125 ಸೈಟ್ಗಳನ್ನು ಮಾಡಿದ್ದು, ಈ ನಕಲಿ ಖಾತೆಗೆ ಕಾರಣಕರ್ತರಾದವರು ಖಾತೆಗಳನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಆದ್ದರಿಂದ ಒಪ್ಪಿಗೆ ಪಡೆಯದೆ ದೇವಸ್ಥಾನದ ಜಾಗವನ್ನು 1993ರಿಂದ 95ರಲ್ಲಿ 182 ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡಿದ್ದು, ಈ ನಕಲಿ ಹಕ್ಕುಪತ್ರವನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಪಿ.ಸಿ. ಮಂಜುನಾಥ್, ನಾಗರಾಜ್, ಎನ್. ರೂಪ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.