ಬೆಂಗಳೂರು: ದೇಶದ ವಿವಿಧ ನ್ಯಾಷನಲ್ ಬ್ಯಾಂಕ್ ಗಳಲ್ಲಿ ಕೋಟಿ ಕೋಟಿ ಸಾಲ ಪಡೆದು ದೇಶದಿಂದಲೇ ಪರಾರಿಯಾಗಿ ಬೇರೆ ದೇಶಗಳಲ್ಲಿ ತಲೆಮರಿಸಿಕೊಂಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಅದರಂತೆಯೇ ಇದೀಗ ರಾಜ್ಯದ ವಿವಿಧ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಪಡೆದು ಪರಾರಿಯಾದ ಸಾವಿರಾರು ಮಂದಿ ಇದ್ದಾರೆ.
ಹೌದು, 2,888 ಮಂದಿ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಪಡೆದು ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್(DCC) ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕ್ ಗಳಿಂದ 1,404 ಕೋಟಿ ಸಾಲವನ್ನು ಪಡೆದಿದ್ದ 2,888 ಮಂದಿ ಸಾಲ ತೀರಿಸಲು ಆಗದೇ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇನ್ನೂ ಹೀಗೆ 1,404 ಕೋಟಿ ಸಾಲ ಪಡೆದು ನಾಪತ್ತೆಯಾಗಿರುವ 2,888 ಮಂದಿಯಲ್ಲಿ ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಸಹಕಾರಿ ಬ್ಯಾಂಕಿನದ್ದೇ ಸಿಂಹಪಾಲು ಆಗಿದೆ. ಈ ಹಿನ್ನಲೆಯಲ್ಲಿ ಈ ಬ್ಯಾಂಕ್ ಎವರ್ ಗ್ರೀನ್ ಕ್ರೆಡಿಟ್ ಎಂಬುದಾಗಿ ಹಾಗೂ 1,400 ಕೋಟಿ ರೂ.ಸಾಲವನ್ನು ಅನುತ್ಪಾದಕ ಆಸ್ತಿನಷ್ಟವೆಂದೂ ಘೋಷಿಸಿದೆ.
ರಾಜ್ಯದ ಇತರೆ ಸಹಕಾರಿ ಬ್ಯಾಂಕ್ ಗಳಲ್ಲಿ 25 ರಿಂದ 30 ವರ್ಷಗಳಿಂದ ಸಾಲಗಾರರು, ತಾವು ಪಡೆದಿರುವ ಸಾಲ ಪಾವತಿಸದಿರುವ ಪರಿಣಾಮ ಅಸಲುಗಿಂತ ಬಡ್ಡಿಯೇ ಜಾಸ್ತಿಯಾಗಿದೆ. ಕೆಲವರು ತಪ್ಪು ವಿಳಾಸ ಕೊಟ್ಟು ಸಾಲ ಪಡೆದಿದ್ದರೇ, ಕೆಲವರು ಸಾಲ ಪಡೆದು ಅಸಲು, ಬಡ್ಡಿ ಕಟ್ಟದೇ ನಾಪತ್ತೆಯಾಗಿದ್ದಾರೆ.
ಬೆಂಗಳೂರಲ್ಲಿ 2,485 ಮಂದಿಯಿಂದ 1,406 ಕೋಟಿ ರೂ, ಮೈಸೂರಲ್ಲಿ 132 ಸಾಲಗಾರರಿಂದ 57 ಲಕ್ಷ, ಬೆಳಗಾವಿ 15 ಮಂದಿಯಿಂದ 41 ಲಕ್ಷ ರೂ ಸೇರಿದಂತೆ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಗಳಲ್ಲಿ ಒಟ್ಟು 2,632 ಮಂದಿ ಪಟ್ಟಣ ಸಹಕಾರ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದಾರೆ. ಇವರಲ್ಲಿ ಒಟ್ಟಾರೆ 2,888 ಮಂದಿ ಸಾಲವನ್ನು ತೀರಿಸಲಾಗದೇ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.